Wednesday, September 4, 2024

ರೇಷ್ಮೆಹುಳು

ತನ್ನ ಸುತ್ತಲೇ ಗೂಡು ಹೆಣೆವ ರೇಷ್ಮೆ ಹುಳುವಿಗೆ 
ಕಾಡದೇ ಒಂಟಿತನ? 
ಯಾವ ನಂಬಿಕೆಯಲಿ 
ಉಸಿರ ಪಣಕ್ಕಿಟ್ಟಿದೆ, ಅದು? 

ಗೂಡು ಕೊರೆದು ಆಚೆ ಬಂದರೆ 
ಮಿಲನ, ಸಂತಾನ, ಅವಸಾನ 
ಉಳಿಯಲು ಆಸೆಪಟ್ಟರೂ 
ತಿನ್ನಲು ಬಾಯಿಯೇ ಇಲ್ಲ 
ಹುಟ್ಟುವ ಮರಿಗಳ ಬಗ್ಗೆ 
ಚಿಂತಿಸಲೂ ಬದುಕಿಲ್ಲ 

ನಾವೂ ಒಳಗಿಂದ ಚಿಟ್ಟೆಯಾಗಲು 
ಮೊದಲು ಒಂಟಿಯಾಗಲೇಬೇಕೆ? 
ಬಂಧಿಯಾಗಲೇಬೇಕೆ? 
ಜೀವ ಜೂಜಾಡಲೇಬೇಕೆ? ಗೊತ್ತಿಲ್ಲ.  

ಭಾಶೇ 

No comments: